ಅಂತರಂಗದ ಗುರು ಶಿವರಾಮ ಹೆಗಡೆಯವರ ಬಗ್ಗೆ ಮಾತನಾಡಲು ನನ್ನ ನಾಲಿಗೆಗೆ ತ್ರಾಣವಿಲ್ಲ : ಚಿಟ್ಟಾಣಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜನವರಿ 19 , 2014
|
ಜನವರಿ 21, 2014
|
ಅಂತರಂಗದ ಗುರು ಶಿವರಾಮ ಹೆಗಡೆಯವರ ಬಗ್ಗೆ ಮಾತನಾಡಲು ನನ್ನ ನಾಲಿಗೆಗೆ ತ್ರಾಣವಿಲ್ಲ : ಚಿಟ್ಟಾಣಿ
ಹೊನ್ನಾವರ :
ಶಿವರಾಮ ಹೆಗಡೆಯವರ ಬಗ್ಗೆ ಮಾತನಾಡಲು ನನ್ನ ನಾಲಿಗೆಗೆ ತ್ರಾಣವಿಲ್ಲ. ಅವರ ಒಂದೊಂದು ಪಾತ್ರವೂ ನಿತ್ಯನೂತನ.
ಒಂದೆಡೆ ಸಂತೋಷ, ಇನ್ನೊಂದೆಡೆ ಯಕ್ಷಗಾನದ ಮಹಾಚೇತನಗಳು ಅಡಗಿ ಹೋಯಿತೇ? ಎನ್ನುವ ದುಃಖವೂ ಇದೆ. ನನ್ನ ಅಂತರಂಗದ ಗುರು, ಗಗನಚೇತನ ಶಿವರಾಮ ಹೆಗಡೆ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಪಾಲಿನ ಭಾಗ್ಯ ಎಂದು ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡುವ ಸಂದರ್ಭದಲ್ಲಿ ಹೇಳಿದರು.
ಮಿಂಚಿನ ಪ್ರವೇಶದೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಅವರ ಶಕ್ತಿ, ಸಾಮಾನ್ಯ ಪದ್ಯಕ್ಕೂ ಜೀವ ತುಂಬುವ ಸಾಮರ್ಥ್ಯ ಇನ್ನೊಬ್ಬರಿಗೆ ಬಂದೇ ಇಲ್ಲ. ಅವರಿಂದ ಕಲಿತಿದ್ದೇನೆ, ಕಲಿತದ್ದನ್ನು ಕೊಟ್ಟಿದ್ದೇನೆ. ಕೆರೆಮನೆಯ ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ, ಎಲ್ಲರೊಂದಿಗೂ ಒಡನಾಡಿದ್ದೇನೆ. ಕೊಂಡದಕುಳಿ ಸಹೋದರರು, ಶಿವರಾಮ ಹೆಗಡೆ, ಕಡತೋಕಾ ಮಂಜುನಾಥ ಭಾಗವತರು ನನ್ನನ್ನು ಬೆಳೆಸಿದ್ದಾರೆ.
ಎಲ್ಲ ಕಲಾವಿದರೂ ಕಲಾಶಕ್ತಿಯ ದೃಷ್ಟಿಯಿಂದ ಶ್ರೀಮಂತರೇ. ಶಂಭು ಹೆಗಡೆಯವರಿಗೆ ಶಂಭು ಹೆಗಡೆಯವರೇ ಉದಾಹರಣೆ. ಬಾಯಿಯಿಂದ ಹೇಳಿ, ಕಾರ್ಯದಿಂದ ಮಾಡಿ ತೋರಿಸುವ ಶಕ್ತಿ ಅವರಲ್ಲಿನ ವಿಶೇಷತೆ.
ನನ್ನ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕವಾಗಿ ಮಾಡಲು ಹಿರಿಯರು ಹೇಳಿಕೊಟ್ಟರು. ಹಾಗೆಯೇ ಈ ವರೆಗೆ ಮುಂದುವರಿಸಿದ್ದೇನೆ. ಸಂತೋಷದಿಂದ ಸನ್ಮಾನ ಸ್ವೀಕರಿಸಿದ್ದೇನೆ. ಪದ್ಮಶ್ರೀ ಪ್ರಶಸ್ತಿ ನನ್ನೊಬ್ಬನಿಗೆ ಬಂದಿದ್ದಲ್ಲ. ಅದು ಯಕ್ಷಗಾನ ಕಲಾಲೋಕಕ್ಕೆ ಸಂದಿದ್ದು. ಪ್ರಶಸ್ತಿಯ ಸಂತಸವನ್ನು ಹೇಳಲಿಕ್ಕೂ ತ್ರಾಣವಿಲ್ಲ, ಈ ವಯಸ್ಸಿನಲ್ಲಿ ನೀಡುವ ಬದಲು 60ರಿಂದ 65ರ ವಯಸ್ಸಿನೊಳಗೆ ನೀಡುವಂತಾಗಬೇಕು ಎಂದರು.
ಕೃಪೆ :
http://kannadaprabha.com
|
|
|